ಎಲ್ಲರನ್ನು ನಕ್ಕು ನಗಿಸುವ ಕನ್ನಡದ ರಿಯಾಲಿಟಿ ಶೋ ‘ಮಜಾ ಟಾಕೀಸ್’. ಈ ಶೋನಲ್ಲಿ ರೆಮೋ ಹೆಸರನ್ನು ನೀವು ಕೇಳಿಯೇ ಇರ್ತೀರಿ. ಸುಶ್ರಾವ್ಯವಾಗಿ ಹಾಡುವ ರೆಮೋ ಸದ್ಯ ಭಾರೀ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ! ಮತ್ತೆ ಸದ್ಯದಲ್ಲೇ ಮಜಾ ಟಾಕೀಸ್ ಶುರುವಾಗುತ್ತಿದ್ಯಾ ಅಂತ ಕೇಳಬೇಡಿ. ಸದ್ಯ ರೆಮೋ ಖುಷಿಯಾಗಿರೋದಕ್ಕೆ ಕಾರಣ ಅವರ ಮಗಳು ಮೇದಿನಿ. ರಾಜ್ಯದಲ್ಲಿ 10ನೇ ತರಗತಿಯ ರಿಸಲ್ಟ್ ಬಂದಿರುವ ವಿಷಯ ನಿಮಗೆಲ್ಲರಿಗೂ ಗೊತ್ತು. ಮಜಾ ಟಾಕೀಸ್ ನಲ್ಲಿ ರೆಮೋ ಎಂದು ಖ್ಯಾತಿ ಆಗಿರುವ ರೇಖಾ ಮೋಹನ್ ಅವರ ಮಗಳು ಎಸ್ ಎಸ್ ಎಲ್ ಸಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರೇಮೋ ಪೋಸ್ಟ್ ಒಂದನ್ನು ಶೇರ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಹೌದು, ಮಕ್ಕಳು ಹೇಗೆ ಇರಲಿ, ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ಮಕ್ಕಳ ಬಗ್ಗೆ ತಂದೆತಾಯಿಗಳಿಗೆ ವಿಶೇಷವಾದ ಪ್ರೀತಿ ಇರುತ್ತೆ. ಅದರಲ್ಲೂ ಓದಿನಲ್ಲಿ ಇಂತಹ ಸಾಧನೆಯನ್ನು ಮಾಡಿದ್ರೆ ಸಾಕು ಪೋಷಕರ ಖುಷಿಗೆ ಪಾರವೇ ಇರುವುದಿಲ್ಲ. ರೆಮೋ ಕೂಡ ತಮ್ಮ ಮಗಳ ಸಾಧನೆಯ ಸಂಭ್ರಮದಲ್ಲಿದ್ದಾರೆ. ಮಗಳನ್ನು ವಜ್ರ ಎಂದು ಕರೆದುಕೊಳ್ಳುವ ರೆಮೋ ಮಗಳ ಫಲಿತಾಂಶ ಬಂದ ಕೂಡಲೇ ಹರ್ಷವನ್ನು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ರೇಮೋ ಮಗಳು ಶೇಕಡ 87 ರಷ್ಟು ಪರ್ಸಂಟೇಜ್ ಪಡೆದು ಫಸ್ಟ್ ಕ್ಲಾಸ್ ಶ್ರೇಣಿಯನ್ನು ಪಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೆಮೋ ಪೋಸ್ಟ್; ’ನನ್ನ ಪ್ರೀತಿಯ ಮಗಳು ನನ್ನ ವಜ್ರ’ ಎಂದು ಬರೆದುಕೊಂಡು ಕೊಂಡಿರುವ ರೆಮೋ, ’ನೀನು ನನ್ನನ್ನ ಅತ್ಯಂತ ಹೆಮ್ಮೆ ಪಡುವಂತೆ ಮಾಡಿದ್ದೀಯಾ ನಿನಗೆ ಶೇಕಡಾ 80ರಷ್ಟು ಅಂಕಗಳು 10ನೇ ತರಗತಿಯಲ್ಲಿ ಬಂದಿದೆ. ಇದು ನನಗೆ ಪ್ರಪಂಚವೇ ಸರಿ. ಎಲ್ಲರ ಜೀವನವೂ ಸುಲಭವಲ್ಲ. ನಮ್ಮದು ಆಗಿರಲಿಲ್ಲ ಆದರೆ ನಿನ್ನಿಂದ ನಮ್ಮೆಲ್ಲ ಕಠಿಣ ಪರಿಶ್ರಮಕ್ಕೇ ಫಲ ಸಿಕ್ಕಿದೆ. ಸಾಧನೆ ಮಾಡುವ ದಿಕ್ಕಿನಲ್ಲಿ ನಿನ್ನ ಈ ಮೊದಲ ಹೆಜ್ಜೆ ನಿನ್ನ ಕನಸುಗಳ ಸಾಕಾರಕ್ಕೆ ಕೈಬೀಸಿ ಕರೆಯುತ್ತಿದೆ. ಹೋಗು ಎಲ್ಲವನ್ನೂ ಪಡೆದುಕೋ ನನ್ನ ಪ್ರೀತಿಯ ಹುಡುಗಿ’. ಅಂತ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ ರೇಖ ಮೋಹನ್.
ಈ ಬಾರಿ ಎಸೆಸೆಲ್ಸಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕಾಣದೆ ಇರುವಷ್ಟು ದಾಖಲೆಯ ರಿಸಲ್ಟ್ ಸಿಕ್ಕಿದೆ. ಸುಮಾರು 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಔಟ್ ಆಫ್ ಔಟ್ ಗಳಿಸಿದ್ದಾರೆ. ಪ್ರತಿ ಬಾರಿಯಂತೆ ಈ ಸಲವೂ ಬಾಲಕಿಯರ ಮೇಲುಗೈ. ಇನ್ನು ನಟನೆ ಹಾಗೂ ಓದು ಎರಡನ್ನು ಸರಿದೂಗಿಸುತ್ತಾ ಓದಿನ ಬಗ್ಗೆಯೂ ಹೆಚ್ಚಿನ ಗಮನವನ್ನು ನೀಡಿರುವ ಇಂತಹ ಮಕ್ಕಳನ್ನು ನೋಡಿದರೆ ಖಂಡಿತವಾಗಿಯೂ ಖುಷಿಯಾಗುತ್ತೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಅಂಜಲಿ ಪಾತ್ರವನ್ನು ನಿರ್ವಹಿಸುತ್ತಿರುವ ಮಹತಿ ವೈಷ್ಣವಿ ಭಟ್ ಕೂಡ ಎಸ್ ಎಸ್ ಎಲ್ ಸಿಯಲ್ಲಿ ಅತ್ಯುತ್ತಮ ಅಂಕವನ್ನು ಪಡೆದಿದ್ದಾರೆ. ತಾವು 625ಕ್ಕೆ 619 ಅಂಕವನ್ನು ಗಳಿಸಿರುವ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ ಮಹತಿ. ಒಟ್ಟಿನಲ್ಲಿ ಈ ಬಾರಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ ತೋರಿದ ಸಾಧನೆ ನಿಜಕ್ಕೂ ರಾಜ್ಯಕ್ಕೆ ಹೆಮ್ಮೆಯ ವಿಷಯ.