ಅಗ್ನಿಸಾಕ್ಷಿ ಖ್ಯಾತಿಯ, ಸನ್ನಿಧಿ ಎಂದೇ ಜನಪ್ರಿಯಗೊಂಡಿರುವ, ವೈಷ್ಣವಿ ಗೌಡ ಅವರ ವಿವಾಹದ ವಿಚಾರವಾಗಿ ಬಿರುಗಾಳಿ ಎದ್ದಿದೆ. ಎಲ್ಲವೂ ಸರಿಯಾಗಿದೆ ಎಂದುಕೊಂಡೆ ಬೊಟ್ಟಿಡುವ ಶಾಸ್ತ್ರವನ್ನು ಮುಗಿಸಿದ ವೈಷ್ಣವಿ ಗೌಡ ಅವರ ಮನೆಯಲ್ಲಿ ಮಂದ ಆವರಿಸಿದೆ.
ವೈಷ್ಣವಿ ಗೌಡ ಅವರು ವಿದ್ಯಾಭರಣ ಅವರೊಂದಿಗೆ ವಿವಾಹವಾಗುವ ವಿಚಾರವಾಗಿ ಒಂದು ಹೆಜ್ಜೆ ಮುಂದಿಟ್ಟು, ಬೊಟ್ಟಿಡುವ ಶಾಸ್ತ್ರವನ್ನು ಮುಗಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತಲೇ ಅನಾಮಧೇಯ ಹುಡುಗಿಯರಿಬ್ಬರು ಆಡಿಯೋ ರಿಲೀಸ್ ಮಾಡಿದ್ದರು. ‘ವಿದ್ಯಾಭರಣ ಅವರಿಗೆ ಕೆಲವು ಹುಡುಗಿಯರ ಜೊತೆ ಸಂಬಂಧವಿತ್ತು. ವೈಷ್ಣವಿ ಗೌಡ ಅವರು ತುಂಬಾ ಒಳ್ಳೆಯವರು. ಅವರು ವಿದ್ಯಾಭರಣ ಅವರನ್ನು ವಿವಾಹವಾದರೆ ವಿಚ್ಛೇದನ ಖಂಡಿತ’ ಎಂಬ ಹೇಳಿಕೆಗಳಿತ್ತು.
ಇದರಿಂದ ಬೇಸರಗೊಂಡ ವೈಷ್ಣವಿ ಗೌಡ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅಲ್ಲದೆ ಈ ಕುರಿತಾಗಿ ಅವರ ತಂದೆ ಮಾತನಾಡಿದ್ದು, ‘ಐದಾರು ವರ್ಷಗಳ ಹಿಂದೆ ವಿದ್ಯಾಭರಣ ಅವರ ಪರಿಚಯವಾಗಿತ್ತು. ನನ್ನ ಮಗಳು ವೈಷ್ಣವಿ ಹಾಗೂ ವಿದ್ಯಾಭರಣ ಇಬ್ಬರು ಒಂದೇ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಮುಂದಿನ ಜೀವನ ಸುಖಮಯವಾಗಿ ಸಾಗಬಹುದು ಎಂದು ಊಹಿಸಿ ಮದುವೆ ಮಾಡಲು ನಾವೆರಡು ಕುಟುಂಬಗಳು ಮುಂದಾದೆವು. ಈ ರೀತಿ ಆಡಿಯೋ ರಿಲೀಸ್ ಆಗುತ್ತದೆ ಎಂದು ತಿಳಿದಿರಲಿಲ್ಲ. ನನ್ನ ಮಗಳು ಏನು ನಿರ್ಧರಿಸುತ್ತಾಳೆಯೋ ಅವಳ ನಿರ್ಧಾರಕ್ಕೆ ನಾವು ಒಪ್ಪುತ್ತೇವೆ’ ಎಂದಿದ್ದರು.
ಇದೀಗ ಅವರ ತಾಯಿ ಪ್ರತಿಕ್ರಿಯೆ ನೀಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಆಡಿಯೋ ರಿಲೀಸ್ ಆದ ಬಳಿಕ ವೈಷ್ಣವಿ ಗೌಡ ಅವರ ತಾಯಿ ಮೊದಲ ಬಾರಿಗೆ ಮಾತನಾಡಿದ್ದು, ‘ಮೊನ್ನೆ ನಡೆದಿರುವುದು ವೈಷ್ಣವಿ ಹಾಗೂ ವಿದ್ಯಾಭರಣ ಅವರ ನಿಶ್ಚಿತಾರ್ಥವಲ್ಲ..ಗಂಡಿನ ಕಡೆಯವರು ನಮ್ಮ ಮನೆಗೆ ಬಂದು ಹೆಣ್ಣು ನೋಡುವ ಶಾಸ್ತ್ರವನ್ನು ಮುಗಿಸಿಕೊಂಡು ಹೋಗಿದ್ದಾರೆ. ನಾವಿನ್ನು ಅವರ ಮನೆಗೆ ಹೋಗಿಲ್ಲ. ಹೋಗಬೇಕು ಎನ್ನುವಷ್ಟರಲ್ಲಿ ಈ ರೀತಿಯ ರಾದ್ಧಾಂತವಾಯಿತು. ವಿದ್ಯಾಭರಣ ಅವರ ತಾಯಿ ಕೂಡ ನಮ್ಮ ಜೊತೆ ಮಾತನಾಡಿದ್ದಾರೆ. ನನ್ನ ಮಗ ಅಂಥವನಲ್ಲ ಎಂದು ವಾಯ್ಸ್ ನೋಟ್ ಕೂಡ ಕಳಿಸಿದ್ದಾರೆ. ನಮಗೂ ವಿದ್ಯಾಭರಣ ಒಳ್ಳೆಯ ಹುಡುಗನಂತೆ ಅನಿಸಿದ್ದಾನೆ’ ಎಂದಿದ್ದರು.
ಅಲ್ಲದೆ ಆ ಹುಡುಗಿಯರಿಬ್ಬರು ‘ನಮ್ಮ ಒಳ್ಳೆಯದಕ್ಕಾಗಿ ಆಡಿಯೋ ರಿಲೀಸ್ ಮಾಡಿದರೆ ನಮ್ಮ ಎದುರಲ್ಲೇ ಬಂದು ಮಾತನಾಡಬೇಕಿತ್ತು. ಅವರ ಹಿಂದೆ ಬೇರೆ ಏನೋ ಇರಬಹುದು. ಆ ಹುಡುಗಿಯರಿಬ್ಬರೂ ಎದುರಲ್ಲಿ ಬಂದು ಮಾತನಾಡದ ಕಾರಣ, ಅವರ ಮಾತನ್ನು ನಾವು ನಂಬುವುದಿಲ್ಲ’ ಎಂದು ವೈಷ್ಣವಿ ಗೌಡ ಅವರ ತಾಯಿ ಹೇಳಿದ್ದಾರೆ. ಇದೀಗ ಮುಂಬರುವ ದಿನಗಳಲ್ಲಿ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಅವರ ನಿಶ್ಚಿತಾರ್ಥ ಕಾರ್ಯವು ನೆರವೇರಲಿದೆಯೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಾಗಿದೆ.