ಸೃಜನ್ ಲೋಕೇಶ್ ಮತ್ತು ವಸತಿ ಸಚಿವ ವಿ ಸೋಮಣ್ಣ ಅವರ ಪುತ್ರ, ಅರುಣ್ ಸೋಮಣ್ಣ ಪಬ್ ವೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ, ಈ ಗಲಾಟೆಯ ವಿಚಾರವಾಗಿ ಪೋಲಿಸ್ ಕೇಸ್ ಕೂಡ ದಾಖಲಾಗಿದೆ ಎನ್ನಲಾಗುತ್ತಿದೆ. ಸೋಮವಾರದ ತಡ ರಾತ್ರಿಯಲ್ಲಿ ಬೆಂಗಳೂರಿನ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್ ನಲ್ಲಿ ಇವರಿಬ್ಬರ ನಡುವೆ ಕಾಳಗ ನಡೆದಿದೆ ಎನ್ನಲಾಗುತ್ತಿದೆ.
ಸೃಜನ್ ಲೋಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ, ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಮಜಾ ಟಾಕೀಸ್, ಮಜಾ ವಿತ್ ಸೃಜಾ, ಛೋಟಾ ಚಾಂಪಿಯನ್ ಗಳಲ್ಲಿ ಹೋಸ್ಟ್ ಆಗಿ ಬಿಗ್ ಬಾಸ್ ಸೀಸನ್ 2ನಲ್ಲಿ ಸ್ಪರ್ಧೆಯಾಗಿ, ರಾಜ ರಾಣಿ, ಗಿಚ್ಚಿ ಗಿಲಿ ಗಿಲಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ ಅವರು ತಂಡದವರೊಂದಿಗೆ ಪ್ರಾಕ್ಟೀಸ್ ನಡೆಸಿ, ತಡರಾತ್ರಿಯಲ್ಲಿ ತಂಡ ಸಮೇತವಾಗಿ ಕಿಂಗ್ಸ್ ಕ್ಲಬ್ ತಲುಪಿದ್ದರಂತೆ. ಇವರ ಹೋಲ್ ಟೀಮ್ ಕ್ಲಬ್ಬ್ನಲ್ಲಿ ಜೋರಾಗೆ ಪಾರ್ಟಿ ಮಾಡಿದ್ದು, ಇವರ ಕೂಗಾಟವು ಅಲ್ಲೇ ಇದ್ದ ಅರುಣ್ ಸೋಮಣ್ಣ ಅವರ ಕಿವಿಗೂ ಬಿತ್ತಂತೆ. ಕಿರುಚಾಡಿದ್ದಕ್ಕಾಗಿ ಸೃಜನ್ ಲೋಕೇಶ್ ಹಾಗೂ ತಂಡವನ್ನು ಪ್ರಶ್ನೆ ಮಾಡಿದ ಅರುಣ್ ಸೋಮಣ್ಣ ಅವರೊಂದಿಗೆ ಜಗಳವೂ ಮಾತಿನಲ್ಲಿ ಪ್ರಾರಂಭವಾಗಿ, ಹೊಡೆದಾಟದವರೆಗೂ ತಲುಪಿತ್ತು ಎನ್ನಲಾಗುತ್ತಿದೆ…
ಈ ಕುರಿತಾಗಿ ಮಾಧ್ಯಮಗಳಲ್ಲಿ ಮಾತನಾಡಿರುವ ಟೂರ್ನಮೆಂಟ್ ಆಟಗಾರ ವಿಕಾಸ್ ಅವರು “ನಾವು ಆಟದ ಪ್ರಾಕ್ಟೀಸ್ ಮತ್ತು ಮೀಟಿಂಗ್ ಮುಗಿಸುವಾಗ ರಾತ್ರಿಯಾಗಿತ್ತು. ಆದರೆ ಗಲಾಟೆಯೇನು ನಡೆದಿಲ್ಲ. ಅರುಣ್ ಸೋಮಣ್ಣ ಅವರು ಅಲ್ಲಿ ಇರಲೇ ಇಲ್ಲ. ಅಂದು ಸೃಜನ್ ಲೋಕೇಶ್ ಬೇಗ ಹೊರಟಿದ್ದರು. ನಂತರ ನಾವು ಹೊರಟೆವು. ಗಲಾಟೆಯಾಗಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ” ಎಂದಿದ್ದಾರೆ.
ಈ ಗಲಾಟೆಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಅರುಣ್ ಸೋಮಣ್ಣ ಅವರು ‘ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ರಂಗದಲ್ಲಿದ್ದು ನನ್ನ ತಂದೆ ಮಾಡಿದ ಒಳ್ಳೆಯ ಕಾರ್ಯಗಳು ವಿರೋಧಿಗಳ ಕಂಗೆಡಿಸಿವೆ. ಇದರಿಂದ ಹತಾಶೆಗೊಂಡಿರುವ ವಿರೋಧಿಗಳು ನನ್ನ ತಂದೆಗೆ ಕೆಟ್ಟ ಹೆಸರು ತರಬೇಕೆಂದು, ಕುತಂತ್ರದ ಮೂಲಕ ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ’ ಎಂಬ ಹೇಳಿಕೆಗಳನ್ನು ನೀಡಿದ್ದಾರೆ.