ಅನಾಥ ಶವವನ್ನು 2 ಕಿ.ಮಿ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ಮಹಿಳಾ PSI

ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನನದಿಂದ ಮರಣದವರೆಗೆ ಹಲವಾರು ಸಂಸ್ಕಾರಗಳನ್ನು ಆಚರಿಸುವ ಸಂಪ್ರದಾಯವಿದೆ. ವ್ಯಕ್ತಿಯ ಅಂತ್ಯಕ್ರಿಯೆಯನ್ನು ಆತನ ಜೀವನದ ಕೊನೆಯ ವಿಧಿಯೆಂದು ಪರಿಗಣಿಸಲಾದರೂ ವ್ಯಕ್ತಿಯ ಮರಣಾ ನಂತರ ಆತನ ಸಂಬಂಧಿಕರು ಮತ್ತು ಕುಟುಂಬದವರು ಆತ್ಮದ ಶಾಂತಿಗಾಗಿ ಹಾಗೂ ಮೋಕ್ಷಕ್ಕಾಗಿ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಹೆಚ್ಚಾಗಿ ವ್ಯಕ್ತಿಯ ಮರಣದ ನಂತರ ಕೊನೆಯ ವಿಧಿ ವಿಧಾನಗಳನ್ನು ಗಂಡು ಮಗನೇ ಮಾಡಬೇಕು ಎನ್ನುವುದು ಕೂಡಾ ಇದೆ. ಆದರೆ ಯಾರೂ ಇಲ್ಲದ ಅನಾಥ ಶವಕ್ಕೆ PSI ಆಗಿ ಕಾರ್ಯ ನಿರ್ವಹಿಸುತ್ತಿರುವ ಓರ್ವ ಮಹಿಳೆ ಅಂತ್ಯ ಸಂಸ್ಕಾರ ಮಾಡಿದ್ದಾಳೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪೌರಾಣಿಕ ಕಥೆಗಳ ಮತ್ತು ನಂಬಿಕೆಗಳ ಪ್ರಕಾರ, ಜನರು ಯಾವುದೇ ಸಮಾರಂಭವನ್ನು ಆಚರಿಸುವ ಮೊದಲು ತಮ್ಮ ಪೂರ್ವಜರನ್ನು ಪೂಜಿಸಬೇಕು. ಪೂರ್ವಜರನ್ನು ಸಮಾಧಾನಪಡಿಸಿದರೆ, ದೇವರುಗಳೂ ಸಂತೋಷಪಡುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಹಿರಿಯರು ಜೀವಂತವಾಗಿರುವಾಗ ಅವರನ್ನು ಗೌರವಿಸುವುದು ಮಾತ್ರವಲ್ಲ, ಅವರ ಮರಣದ ನಂತರವೂ ಶ್ರಾದ್ಧ ಮಾಡುವ ಮೂಲಕ ಅವರನ್ನು ಗೌರವಿಸಬೇಕು. ಆಚರಣೆಗಳ ಪ್ರಕಾರ ಶ್ರಾದ್ಧ ಕಾರ್ಯವನ್ನು ಮಾಡದಿದ್ದರೆ ಅವನ / ಅವಳ ನಿಧನದ ನಂತರವೂ ಮೋಕ್ಷವನ್ನು ಪಡೆಯುವುದಿಲ್ಲ ಎಂಬ ನಂಬಿಕೆಯಿದೆ. ಅದೇ ರೀತಿಯಾಗಿ ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರಕ್ಕೆ ಸಹಾಯ ಮಾಡಿ ಮೋಕ್ಷ ಪಡೆಯಲು ಸಹಾಯ ಮಾಡಿ ಅನಾಥ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಪಿಎಸ್‌ಐ ಪೊಲೀಸ್ ಅಧಿಕಾರಿಯ ಮಾನವೀಯ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ಸರ್ಕಾರಿ ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸುವ, ಅವರ ಕಷ್ಟದಲ್ಲಿ ಭಾಗಿಯಾಗಿ ಮಾನವೀಯತೆ ತೋರುವ ಘಟನೆಗಳು ಆಗಾಗ ಸದ್ದು ಮಾಡುತ್ತಿರುತ್ತವೆ. ಹೀಗಿರುವಾಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅನಾಥ ಶವಕ್ಕೆ ಹೆಗಲು ಕೊಟ್ಟು, ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಘಟನೆ ನಡೆದದ್ದು ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ. ಈ ಪೊಲೀಸ್​ ಠಾಣೆಯ ಮಹಿಳಾ ಪಿಎಸ್​ಐ ಕೆ. ಸಿರಿಶಾ ತಮ್ಮ ಕಾರ್ಯ ವೈಖರಿಯಿಂದ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಸುಮಾರು 2 ಕಿ.ಮೀ ವರೆಗೆ ಈ ಪೊಲೀಸ್ ಅಧಿಕಾರಿ ಇತರ ಇಬ್ಬರು ವ್ಯಕ್ತಿಗಳ ಜೊತೆ ಸೇರಿ, ಅಪರಿಚಿತ ವ್ಯಕ್ತಿಯ ಶವವನ್ನು ಹೊತ್ತೊಯ್ದು, ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸದ್ಯ ಅವರ ಈ ಮಾನವೀಯ ನಡೆಯ ಪೋಟೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಮಹಿಳಾ ಅಧಿಕಾರಿಯ ನಡೆಗೆ ಸೆಲ್ಯೂಟ್ ಎಂದಿದ್ದಾರೆ.

ಇನ್ನು ಈ ಅಪರಿಚಿತ ವ್ಯಕ್ತಿ ಭಿಕ್ಷುಕನಾಗಿದ್ದು, ಅನಾರೋಗ್ಯದಿಂದಾಗಿ ರಸ್ತೆ ಬದಿಯಲ್ಲೇ ಕೊನೆಯುಸಿರೆಳೆದಿದ್ದ. ಅನಾಥನಾಗಿದ್ದ ಈತನ ಬಳಿಗೆ ಯಾರೂ ಸುಳಿದಾಡಿರಲಿಲ್ಲ. ಈ ಮಾಹಿತಿ ಪಡೆದ ಮಹಿಳಾ ಪಿಎಸ್​ಐ ಸಿರಿಶಾ ಸ್ಥಳಕ್ಕೆ ತೆರಳಿ, ಸ್ವತಃ ಮುಂದೆ ಬಂದು ಕೆಲ ಸ್ಥಳೀಯರ ಜತೆಗೂಡಿ ಮೃತದೇಹಕ್ಕೆ ಹೆಗಲು ಕೊಟ್ಟಿದ್ದಾರೆ. ಬಳಿಕ ಲಲಿತಾ ಚಾರಿಟಬಲ್​ ಟ್ರಸ್ಟ್​ ಸಹಕಾರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸೋಮವಾರ ನಡೆದ ಈ ಘಟನೆಯ ವಿಡಿಯೋ ಹಾಗೂ ಫೋಟೋಗಳು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಸಂಬಂಧಿಕರೇ ವ್ಯಕ್ತಿಯೊಬ್ಬ ಮೃತಪಟ್ಟಾಗ ಹೆಗಲು ಕೊಡಲು ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ, ಅನಾಥ ಶವವೊಂದನ್ನು ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ನೇರವೇರಿಸಿರುವ ಸಿರಿಶಾರವರ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Leave a Comment

error: Content is protected !!