‘ಪುನೀತಪರ್ವ’ ಕಾರ್ಯಕ್ರಮಕ್ಕೆ ಅಪ್ಪು ಮಗಳು ಧೃತಿ ಬರಲೇ ಇಲ್ಲ ಕಾರಣ ಏನು ಗೊತ್ತಾ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರ ನೆನಪುಗಳನ್ನು ಹಂಚಿಕೊಳ್ಳುತ್ತಾ, ಅವರ ಮೇಲಿನ ಪ್ರೀತಿ, ಅಭಿಮಾನಗಳನ್ನು ಮತ್ತೊಮ್ಮೆ ಮೇಳೈಸಲು ಹಮ್ಮಿಕೊಂಡಂತಹ ಕಾರ್ಯಕ್ರಮವಾದ ‘ಪುನೀತಪರ್ವ’ವು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯಿತು.

ದಕ್ಷಿಣ ಭಾರತದ ಸಿನಿಮಾರಂಗದ ದಿಗ್ಗಜರು, ಮುದ್ದು ಮೊಗದ ತಾರೆಯರು, ಸಹಕಲಾವಿದರು, ಸಹಾಯಕರು, ರಾಜಕೀಯ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳನ್ನು ಒಂದೇ ಆವರಣದಡಿಯಲ್ಲಿ ಸೇರಿಸಿದಂತಹ ಕಾರ್ಯಕ್ರಮ. ಪುನೀತ್ ರಾಜಕುಮಾರ್ ಎಂದರೆ ಇಡೀ ಕರ್ನಾಟಕಕ್ಕೆ ಅಚ್ಚುಮೆಚ್ಚು. ಪುನೀತ್ ಅವರ ಅಕಾಲಿಕ ಮರಣವು ಕೋಟಿ ಕನ್ನಡಿಗರ ಮನ ನೋಯಿಸಿದೆ. ಕಡಿಮೆ ವಯಸ್ಸಿನಲ್ಲಿ ಅಪಾರ ಸಾಧನೆಗೈದು, ಸರಳಾತಿ ಸರಳ ಮನುಜನಾಗಿ ಕರುಣೆಯ ಮೆರೆದು, ಅವರು ನಡೆದ ಹಾದಿ ಕನ್ನಡಿಗರ ಹೆಮ್ಮೆ.

ಕನ್ನಡ ಭಾಷೆಯಲ್ಲಷ್ಟೇ ಅಲ್ಲದೆ ಪರಭಾಷಿಗರನ್ನು ಸೆಳೆಯುವಂತ ವ್ಯಕ್ತಿತ್ವ ಹೊಂದಿದ್ದ ಪವರ್ ಸ್ಟಾರ್ ಅವರನ್ನು ನೆನೆದು ತೆಲುಗಿನ ನಟ ರಾಣ ದಗ್ಗುಬಾಟಿ ಮತ್ತು ಅಖಿಲ್ ಅಕ್ಕಿನೇನಿ, ತಮಿಳು ನಟ ಸೂರ್ಯ ಆಗಮಿಸಿದ್ದರು. ಹಿರಿಯ ನಟ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಇವರು ಕಾರಣಾಂತರಗಳಿಂದ ಬೆಂಗಳೂರಿಗೆ ಬರದಿದ್ದರೂ ವಿಡಿಯೋ ಬೈಟ್ಗಳನ್ನು ಕಳುಹಿಸಿಕೊಟ್ಟಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್, ರಾಕಿಂಗ್ ಸ್ಟಾರ್ ಯಶ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ಅಜಯ್ ರಾವ್, ಕೃಷ್ಣ, ರಾಧಿಕಾ ಪಂಡಿತ್, ಆಶಿಕಾ ರಂಗನಾಥ್, ಪ್ರಕಾಶ್ ರೈ, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಸಂಪೂರ್ಣ ಕನ್ನಡ ಚಿತ್ರರಂಗವೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಪ್ಪು ಅವರನ್ನು ನೆನೆಯುತ್ತಿತ್ತು.

ಅಲ್ಲದೇ ವೇದಿಕೆಯು ಪುನೀತ್ ಅವರ ಕನಸಿನ ಗಂಧದಗುಡಿಯ ವಿಚಾರ ಹಂಚಿಕೆಗೂ ಸಾಕ್ಷಿಯಾಗಿತ್ತು. ವೇದಿಕೆಯ ಮೇಲೆ ಶಿವಣ್ಣ ಸ್ಟೆಪ್ಸ್ ಹಾಕಿದ್ದರೆ, ಮೋಹಕ ತಾರೆ ರಮ್ಯಾ ನೃತ್ಯ ಮಾಡಿದ್ದಾರೆ. ಅರ್ಮಾನ್ ಮಾಲಿಕ್, ವಿಜಯ್ ಪ್ರಕಾಶ್ ಇವರು ಪುನೀತ್ ಅವರ ನೆನಪಿನ ಹಾಡುಗಳನ್ನು ಹಾಡಿದ್ದಾರೆ. ಈ ಎಲ್ಲಾ ವಿಶೇಷತೆಗಳಿಂದ ಕೂಡಿದ ಈ ಕಾರ್ಯಕ್ರಮಕ್ಕೆ ದೊಡ್ಡ ಮನೆಯ ಕುಟುಂಬದವರೆಲ್ಲ ಆಗಮಿಸಿದ್ದರು. ಪುನೀತ್ ಅವರ ಹೆಂಡತಿ ಅಶ್ವಿನಿ ಹಾಗೂ ಮಗಳು ವಂದಿತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಭಾವುಕರಾಗಿ ನೋಡುತ್ತಿದ್ದರು. ಆದರೆ ಪುನೀತ್ ಅವರ ಹಿರಿಯ ಮಗಳಾದ ಧೃತಿ ಬಂದಿರಲಿಲ್ಲ. ಈ ಬಗ್ಗೆ ಕೇಳಿದಾಗ ಎರಡನೇ ಮಗಳು ವಂದಿತಾ ಕಣ್ಣೀರು ಹಾಕುತ್ತಾ ‘ವಿದ್ಯಾಭ್ಯಾಸವನ್ನು ಅಕ್ಕ ಅಮೆರಿಕದಲ್ಲಿ ಮಾಡುತ್ತಿದ್ದು, ಆಕೆಗೆ ಪರೀಕ್ಷೆ ಇದ್ದ ಕಾರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ’ ಎಂದಳು.

Leave a Comment

error: Content is protected !!