ರಾಜಾಜಿನಗರದಲ್ಲಿರುವ ಮನೆಯನ್ನು ಖಾಲಿ ಮಾಡಿರುವುದರ ಬಗ್ಗೆ ಮೊದಲ ಬಾರಿ ಭಾವುಕರಾಗಿ ಕಾರಣ ಹೇಳಿಕೊಂಡ ನಟ ರವಿಚಂದ್ರನ್

ಕನ್ನಡ ಚಿತ್ರರಂಗದಲ್ಲಿ ‘ಪ್ರೇಮಲೋಕ’ವನ್ನೇ ತೋರಿಸಿ, ಹೊಸ ಹೊಸ ಹಾಡು ಸಿನಿಮಾದ ‘ಕನಸುಗಾರ’ನಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಹಿರಿಯ ಮಗನ ಮದುವೆಯ ನಂತರ ರಾಜಾಜಿನಗರದಲ್ಲಿರುವ ಮನೆಯನ್ನು ಕುಟುಂಬ ಸಮೇತವಾಗಿ ಬಿಟ್ಟು ಹೋಗಿ, ಹೊಸಕೆರೆಹಳ್ಳಿಯಲ್ಲಿರುವ ತಮ್ಮದೇ ಮತ್ತೊಂದು ಮನೆಯಲ್ಲಿ ನೆಲೆಸಿದ್ದಾರೆ ಎಂದು ಸುದ್ದಿಯಾಗಿತ್ತು.

ಆಪ್ತರ ಸಲಹೆ ಮೇರೆಗೆ ವಾಸ್ತು ಸರಿ ಇಲ್ಲದ ಕಾರಣ ಅವರ ಕನಸಿನ ಮನೆಯು ನವೀಕರಿಸುವುದರ ಮೂಲಕ ಮತ್ತೊಮ್ಮೆ ಸಿದ್ಧಗೊಳ್ಳುತ್ತಿದೆ ಎನ್ನಲಾಗುತ್ತಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ, ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ‘ನಾನು ಒಂದು ತಿಂಗಳ ಹಿಂದೆಯೇ ಮನೆಯನ್ನು ಖಾಲಿ ಮಾಡಿದೆ’ ಎಂದು ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ “ದುಡ್ಡು ಕಳೆದುಕೊಂಡು ಮನೆ ಮಾರಿದ್ದಾನೆ ಎಂದು ಹಲವರು ನನ್ನ ಹಿಂದೆ ಹೇಳಿದವರಿದ್ದಾರೆ. ಹಣಕಾಸಿನ ವಿಷಯದಲ್ಲಿ ಸೋತವನು ಎಂದು ನಕ್ಕಿದ್ದಾರೆ. ಆದರೆ ನಾನು ದುಡ್ಡನ್ನು ಇಂದು ಕಳೆದಿದ್ದಲ್ಲ. 30 ವರ್ಷಗಳಿಂದ ಕಳೆದುಕೊಂಡೆ ಬಂದಿದ್ದೇನೆ. ಯಾರಿಗೋಸ್ಕರ, ಯಾತಕ್ಕಾಗಿ ಕಳೆದುಕೊಂಡಿದ್ದೇನೆ ಎಂದು ನಿಜವಾಗಿ ಅರ್ಥವಾಗಬೇಕಿರುವುದು ನಿಮಗೆ. ನಿಮ್ಮ ಮನರಂಜನೆಗಾಗಿ, ನಿಮ್ಮ ಪ್ರೀತಿಯನ್ನು ಗಳಿಸುವುದಕ್ಕಾಗಿ, ಸಿನಿಮಾ ರಂಗದಿಂದಲೇ ಗೆಲ್ಲಬೇಕೆಂಬ ನನ್ನ ಆಸೆಯಿಂದ ಹಣವನ್ನು ಕಳೆದುಕೊಂಡೆ ಬಂದಿದ್ದೇನೆ. ನಿಮ್ಮ ಮನಸ್ಸನ್ನು ಗೆಲ್ಲಬೇಕೆಂದು ಎಲ್ಲವನ್ನು ಕಳೆದುಕೊಂಡುಬಿಟ್ಟಿದ್ದೇನೆ. ಆದರೆ ಇದು ಯಾವುದರಿಂದಲೂ ನನಗೆ ಬೇಸರವಿಲ್ಲ. ಮತ್ತೊಮ್ಮೆ ಗೆದ್ದೇ ಗೆಲ್ಲುತ್ತೇನೆ ಎಂಬ ಆವೇಶವಿದೆ. ರವಿಚಂದ್ರನ್ ಅವರ ಮಟ್ಟಕ್ಕೆ ಬೆಳೆದಿಲ್ಲ, ಇವರಂತೆ ಗೆಲ್ಲಲಿಲ್ಲ ಎಂದು ಎಷ್ಟೇ ಜನ ಮಾತನಾಡಿಕೊಂಡರು ಕಿವಿಗೊಡುವುದಿಲ್ಲ. ಯಾಕೆಂದರೆ ನಾನು ಸ್ಪರ್ಧಾಳುವಲ್ಲ. ಯಾರನ್ನು ನಾನು ಗೆಲ್ಲಬೇಕಾಗಿಲ್ಲ. ನನಗೆ ದುಡ್ಡು ಬೇಕಾಗಿಯೂ ಇಲ್ಲ. ದುಡ್ಡು ಬೇಕಾಗಿರೋದು ಸಿನಿಮಾ ಮಾಡೋದಿಕ್ಕೆ. ನಾನು ಸಂಪಾದನೆ ಮಾಡುವುದು ರಾಯಲ್ ಆಗಿ ಬದುಕುವುದಕಲ್ಲ; ರಾಯಲ್ ಆಗಿ ಸಿನಿಮಾ ಮಾಡುವುದಕ್ಕೆ” ಎಂದು ಸಿನಿಮಾರಂಗದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

“ನನಗೆ ಬೇಸರವಾದದ್ದು ಸಿನಿಮಾ ಸೋತಿದ್ದರಿಂದಲ್ಲ. ನಿಮ್ಮನ್ನು ಮೆಚ್ಚಿಸಲಾಗಲಿಲ್ಲ ಎಂಬ ನೋವಿನಿಂದ. ನೀವೆಲ್ಲ ನುಗ್ಗಿ ಬರುವಂತ ಸಿನಿಮಾವನ್ನು ಮಾಡಿಯೇ ಮಾಡುತ್ತೇನೆ. ನನ್ನ ಜೀವನದಲ್ಲಿ ಭಯವೆಂಬುದು ಎಂದು ಕಾಡಿಲ್ಲ ಆದರೆ ಮಕ್ಕಳಿಗೆ ಏನು ಮಾಡಿಲ್ಲವೆಂಬ ಚಿಂತೆ ಇದೆ. ನಾನು ಮನಸ್ಸು ಮಾಡಿದ್ರೆ ತುಂಬಾನೇ ಆಸ್ತಿಗಳಿಸಬಹುದಿತ್ತು ಆದರೆ ನನಗೆ ಸಿನಿಮಾನೇ ಪ್ರಪಂಚವಾಗಿತ್ತು” ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಸಿನಿಪ್ರಿಯರಿಗೆ ‘ನೀವು ನನ್ನ ಮುಖ ಮತ್ತು ಮನಸ್ಸನ್ನು ನೋಡಿ ಪ್ರೀತಿ ಮಾಡಿ; ಜೀವನಪೂರ್ತಿ ನಿಮ್ಮ ಕಾಲಡಿಯಲ್ಲಿಯೇ ಇರುತ್ತೇನೆ’ ಎಂದು ಭಾವುಕರಾಗಿ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ನುಡಿದಿದ್ದಾರೆ.

Leave a Comment

error: Content is protected !!